ಆದರೆ ಅವರು ಎಲ್ಲೋ ಕುಳಿತು ಕೇಳಿದ ಮಾತ್ರಕ್ಕೆ ಪ್ರತ್ಯೇಕ ರಾಜ್ಯ ಕೊಡುವುದಕ್ಕೂ, ಅದನ್ನು ಉಮೇಶ ಕತ್ತಿ ತೆಗೆದುಕೊಳ್ಳುವುದಕ್ಕೂ ಅಪ್ಪನ ಆಸ್ತಿಯನ್ನು ಮಕ್ಕಳು ಹಂಚಿಕೊಂಡಷ್ಟು ಸುಲಭವಲ್ಲ. ಜತೆಗೆ ಈ ಪ್ರತ್ಯೇಕ ರಾಜ್ಯ ರಚನೆಯ ಕಾನೂನು ಪ್ರಕ್ರಿಯೆಯ ಆಳ-ಸಮಯದ ಅರಿವಿಲ್ಲದೆ ತಥಾಕಥಿತ ಕನ್ನಡ ಹೋರಾಟಗಾರರು ಮಾಧ್ಯಮಗಳ ಮುಂದೆ ಭಾವನಾತ್ಮಕಾವಾಗಿ ಕಿರುಚಾಡಿದ್ದಾರೆ. ಮಾಧ್ಯಮಗಳು ಸಹ ಉಮ್ಮೇಶ ಕತ್ತಿ ಹೀಗೆ ಹೇಳಿದ್ದಾರೆ..? ನೀವೇನೂ ಹೇಳುತ್ತೀರಿ ಎಂದು ಪ್ರತ್ಯೇಕ ರಾಜ್ಯ ಬೇಡಿಕೆಯ ಪರ- ವಿರೋಧಿಗಳನ್ನು ಸ್ಪಷ್ಟವಾಗಿ ಜನರ ಮುಂದೆ ತಂದು ನಿಲ್ಲಿಸಿದ್ದಾರೆ. ಅಲ್ಲಿಗೆ ಅವರ ಕೆಲಸ ಮುಗಿದಿದೆ.
ಜತೆಗೆ ಸಂಪತ್ಭರಿತ ಎಂದು ಕಾಣುವ ಪ್ರದೇಶಗಳಲ್ಲೂ ತೀರಾ ಹಿಂದುಳಿದ ತಾಲೂಕು ಜಿಲ್ಲೆಗಳಿವೆ. ಇದಕ್ಕೆ ಹಳೇ ಮೈಸೂರು ಭಾಗದ ಗಡಿ ಜಿಲ್ಲೆ ಚಾಮರಾಜನಗರವೇ ಸಾಕ್ಷಿ. ಇನ್ನೂ ಇತ್ತ ಕೋಲಾರ ಜಿಲ್ಲೆಯದ್ದೂ ಅದೇ ಪರಿಸ್ಥಿತಿ. ಈ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. (ಕೋಲಾರ ಭಾಗಕ್ಕೆ ಎತ್ತಿನ ಹೊಳೆ ಯೋಜನೆ ಮಂಜೂರಾಗಿದೆ ಅಷ್ಟೇ.) ಇನ್ನು ಕಾವೇರಿ ಹರಿದಾಡುವ ಮಂಡ್ಯ ಜಿಲ್ಲೆಯ ನಾಗಮಂಗಲ, ಕೆ.ಆರ್. ಪೇಟೆ ತಾಲೂಕುಗಳದ್ದೂ ಇದೇ ಪರಿಸ್ಥಿತಿ. ಅತ್ತ ಕೊಡಗು ಜಿಲ್ಲೆಯಂತೂ ಆಡಳಿತಾತ್ಮಕವಾಗಿ ಕರ್ನಾಟಕದಲ್ಲಿದೆ ಎಂದು ಕೊಳ್ಳಬಹುದು ಅಷ್ಟೇ ಆದ್ರೆ ಮಾನಸಿಕವಾಗಿ ಪ್ರತ್ಯೇಕವಾಗಿಯೇ ಇದೆ. ಉಮೇಶ ಕತ್ತಿ ಅವರಂತೆಯೇ ಈ ಭಾಗದ ನಾಯಕರೆಲ್ಲರೂ ವಿಭಜನೆಯ ಕತ್ತಿ ಹಿಡಿದು ನಿಂತರೆ ಕರ್ನಾಟಕ ಎರಡು ಭಾಗವಲ್ಲ. ತುಂಡು- ತುಂಡಾಗುತ್ತದೆ.
ಕೇವಲ ರಾಜಧಾನಿ ಬೆಂಗಳೂರು ಅಭಿವೃದ್ಧಿಯ ತಳಹದಿಯ ಮೇಲೆ ಇಡಿ ಕರ್ನಾಟಕವನ್ನೂ ಅಳೆಯಲಾಗುವುದಿಲ್ಲ. ರಾಜಧಾನಿಯಲ್ಲಿನ ಒಂದು ಬಡಾವಣೆಯ ಬೀದಿಯಲ್ಲಿನ ಚರಂಡಿ ಕಟ್ಟಿಕೊಂಡೋ, ತೆರೆದುಕೊಂಡೋ ನಿವಾಸಿಗಳು ಅನುಭವಿಸುವ ಕಷ್ಟವೂ, ನೀರು ಪೂರೈಕೆ ಮಾರ್ಗದಲ್ಲಿನ ತುರ್ತು ರಿಪೇರಿ ಕಾರ್ಯನಿಮಿತ್ತ ರಾಜಧಾನಿಯ ಕೆಲ ಬಡಾವಣೆಗಳಿಗೆ ಈ ವಾರ ನೀರು ಸರಬರಾಜು ಆಗುವುದಿಲ್ಲ ಎಂದು ವಾರದ ಮೊದಲೆ ಬೆಂಗಳೂರು ಜಲಮಂಡಳಿ ಹೊರಡಿಸುವ ಪತ್ರಿಕಾ ಪ್ರಕಟಣೆಗೆ ಸಿಕ್ಕಷ್ಟೇ ಪ್ರಾಮುಖ್ಯತೆ ಉತ್ತರ ಕರ್ನಾಟಕದಲ್ಲಿನ ಒಂದು ಗ್ರಾಮದಲ್ಲಿ ಕುಡಿಯುವ ನೀರು, ಚರಂಡಿ ಇಲ್ಲದೆ ಅನುಭವಿಸುವ ಸಂಕಷ್ಟ ಒಂದೆ ಆಗಬೇಕಿದೆ.
ಇದೇ ಪ್ರಶ್ನೆಯನ್ನೂ ಪ್ರತ್ಯೇಕ ರಾಜ್ಯ ಕೇಳುತ್ತಿರುವ ಉಮೇಶ ಕತ್ತಿಯವರನ್ನೂ ಕೇಳಬೇಕಾಗುತ್ತದೆ. ಏಕೆಂದರೆ ಅವರು ಸಚಿವರಾಗಿದ್ದಾಗ ಅದಕ್ಕೂ ಮೊದಲು ಜೆಡಿಎಸ್ನಲ್ಲಿದ್ದಾಗ ಆ ಭಾಗಕ್ಕೆ ಮಾಡಿರುವುದೇನು ಎಂದು. ಏಕೆಂದರೆ ಬಿಜೆಪಿ ಅಧಿಕಾರದಲ್ಲಿರುವಷ್ಟು ದಿನ ಇಬ್ಬರು ಮುಖ್ಯಮಂತ್ರಿಗಳ ಪದಚ್ಯುತಿ, ಮೂವರ ಆಯ್ಕೆ ಪ್ರಕ್ರಿಯೆಯ ಸಭೆಗಳಲ್ಲೇ ತೊಡಗಿಸಿಕೊಂಡಿದ್ದ ಅಂದಿನ ಸಚಿವ ಉಮೇಶ ಕತ್ತಿ ಆ ಭಾಗದ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಳ್ಳಲಿಕ್ಕೆ ಸಮಯ ಇರಲಿಲ್ಲ ಎನಿಸುತ್ತದೆ. ಈಗ ಆ ತರಹದ ಯಾವುದೇ ‘ಮಹತ್ ಕಾರ್ಯ’ಗಳಿಲ್ಲದೆ ಬೇಜಾರು ಆಗಿರುವುದರಿಂದಲೋ ಏನೋ ಅಥವಾ ಆ ದಿನಗಳಲ್ಲಿ ದಿನವೂ ಏನಾದರೂ ಹೇಳಿಕೆಕೊಟ್ಟು ಮಾಧ್ಯಮಗಳಲ್ಲಿ ಮಿಂಚುತ್ತಾ ಈಗ ಏನೂ ಇಲ್ಲದೆ ಅಸ್ತಿತ್ವದ ಪ್ರಶ್ನೆ ಕಾಡಿದ್ದರಿಂದ ಈ ರೀತಿಯ ಮಾಧ್ಯಮಗಳ ಟಿಆರ್ಪಿ ಏರಿಸುವ ಸುದ್ದಿ ಹರಿಯಬಿಟ್ಟಿದ್ದಾರೆ.
ಆದರೆ ಇದೆಲ್ಲಕ್ಕೂ ಮಿಗಿಲಾಗಿ ಮಾಜಿ ಸಚಿವ ಉಮೇಶ ಕತ್ತಿ ಅವರ ಈ ಧ್ವನಿ ಇಡೀ ಉತ್ತರ ಕರ್ನಾಟಕದ ಜನತೆಯ ಬೇಡಿಕೆಯ ಘೋಷಣಾವಾಕ್ಯವಾಗಿ ಬದಲಾವಣೆಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ, ಕರ್ತವ್ಯ ರಾಜ್ಯ ಸರ್ಕಾರದ ಮೇಲಿದೆ. ಜತೆಗೆ ತಥಾಕಥಿತ ಕನ್ನಡ ಹೋರಾಟಗಾರರ ಮೇಲೂ ಇದೆ.
ಇಲ್ಲದಿದ್ದರೇ ಪಕ್ಕದ ಆಂಧ್ರಪ್ರದೇಶದಲ್ಲಿ ಆದ ಪರಿಸ್ಥಿತಿ ನಮ್ಮ ರಾಜ್ಯದಲ್ಲೂ ಮರುಕಳಿಸದಿರಲಿ ಎನ್ನುವುದೇ ಪ್ರತಿಯೊಬ್ಬ ಕನ್ನಡಿಗನ ಒತ್ತಾಸೆ.
ಎಡಿಟರ್ಸ್ ನೋಟ್...
ಭೌಗೋಳಿಕ ಅಂತರ:
ಉತ್ತರ ಕರ್ನಾಟಕದ ಜನ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿರೋದು ರಾಜಧಾನಿಗೂ ಮತ್ತು ಈ ಪ್ರದೇಶಕ್ಕೂ ಇರುವ ಭೌಗೋಳಿಕ ಅಂತರ. ಬೀದರ-646 ಕಿ.ಮೀ. ದೂರ ಇದ್ದರೇ, ವಿಜಾಪುರ-553 ಕಿ.ಮೀ ಮತ್ತು ಬೆಳಗಾವಿ-509 ಕಿ.ಮೀ ದೂರವಿದೆ. ಸರ್ಕಾರದ ಮಟ್ಟದಲ್ಲಿ ಯಾವುದೇ ಸಣ್ಣ ಕೆಲಸವಿದ್ದರೂ ಅಲ್ಲಿನ ಜನ ಬೆಂಗಳೂರಿಗೆ ಬರುವುದು ಅನಿವಾರ್ಯ. ಒಮ್ಮೆ ಬಂದು ವಾಪಸಾಗಲು ಸುಮಾರು 3-4 ದಿನಗಳೇ ಬೇಕು. ಉದಾಹರಣೆಗೆ ಹೇಳಬೇಕೂಂದ್ರೆ, ಮೆಜೆಸ್ಟಿಕ್ನಿಂದ ಸೋಮವಾರ ರಾತ್ರಿ 10 ಗಂಟೆಗೆ ಹೊರಡುವ ರೈಲು ಬೀದರ ತಲುಪುವ ಹೊತ್ತಿಗೆ ಮಂಗಳವಾರ ಮಧ್ಯಾಹ್ನ 4 ಗಂಟೆಗೆ ಆಗಿರುತ್ತೆ. ಅಲ್ಲಿಂದ ತಮ್ಮ ಮನೆ ಸೇರುವ ಹೊತ್ತಿಗೆ ಗಡಿಯಾರ ಎರಡು ಸುತ್ತು ಹಾಕಿಯಾಗಿರುತ್ತದೆ. ಅದರೆ, ಸುಮ್ಮನೆ ಹೀಗೆ ಬಂದು ಹಾಗೆ ಹೋಗುವುದಕ್ಕೇನೇ ಎರಡು ದಿನಗಳು ಬೇಕು ಎಂದಾಯಿತು. ಇದರ ನಡುವೆ ಇಲಾಖೆಗಳಲ್ಲಿ ಸಂಬಂಧಪಟ್ಟವರು ಸಿಗದೇ ಹೋದರೆ ಹೊಟೆಲ್ ಊಟ, ಲಾಡ್ಜ್ ವಸತಿ ಅನಿವಾರ್ಯ. ಹೀರುವಾಗ ಬಹುಪಾಲು ಕೃಷಿಯನ್ನೇ ನೆಚ್ಚಿಕೊಂಡು ಬದುಕುತ್ತಿರುವ ಉತ್ತರ ಕರ್ನಾಟಕದ ಜನ ಹೋಟೆಲ್ ಊಟಕ್ಕಾಗಿ ದಿನಕ್ಕೆ ಕನಿಷ್ಠ 200ರೂ, ವಸತಿಗೆ 500-700 ಖರ್ಚು ಮಾಡಲು ಹೇಗೆ ಸಾಧ್ಯ? ಇದು ಆ ಭಾಗದ ಜನರನ್ನು ಸಾಕಷ್ಟು ಹೈರಾಣಾಗಿಸಿರುವುದು ನಾವೆಲ್ಲಾ ಕನ್ನಡದ ಮೇಲಿಟ್ಟಿರುವ ಅಭಿಮಾನದಷ್ಟೇ ಸತ್ಯ.
ರಮಾಕಾಂತ ಗುಗ್ರಿ
ಸಂಪಾದಕ, ಕನ್ನಡCircle